ಅವನು ಹೇಳಿದ್ದು ಸತ್ಯವಾಗಿದ್ದರೆ ಅವನು ಯಶಸ್ವಿಯಾದನು
Choose an available translation of this Hadeeth
Hadeeth text
ತಲ್ಹ ಬಿನ್ ಉಬೈದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ನಜ್ದ್ ಕಡೆಯಿಂದ, ಕೆದರಿದ ಕೂದಲಿನ ಒಬ್ಬ ವ್ಯಕ್ತಿ ಬಂದನು. ನಮಗೆ ಅವನ ದೊಡ್ಡ ಸ್ವರ ಕೇಳಿಸುತ್ತಿತ್ತು, ಆದರೆ ಅವನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮೀಪಕ್ಕೆ ಬರುವ ತನಕ ಅವನು ಏನು ಹೇಳುತ್ತಿದ್ದಾನೆಂದು ನಮಗೆ ಅರ್ಥವಾಗುತ್ತಿರಲಿಲ್ಲ. ನಂತರ ಅವನು ಇಸ್ಲಾಂ ಧರ್ಮದ ಬಗ್ಗೆ ಕೇಳುತ್ತಿದ್ದಾನೆಂದು ತಿಳಿಯಿತು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಂದು ದಿನ-ರಾತ್ರಿಯಲ್ಲಿ ಐದು ವೇಳೆ ನಮಾಝ್ ನಿರ್ವಹಿಸುವುದು." ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು. ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು." ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝಕಾತ್ನ ಬಗ್ಗೆ ತಿಳಿಸಿದರು. ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು." ಆ ವ್ಯಕ್ತಿ ಹಿಂದಿರುಗಿ ಹೋಗುತ್ತಾ ಹೇಳತೊಡಗಿದನು: "ಅಲ್ಲಾಹನ ಮೇಲಾಣೆ! ನಾನು ಇದಕ್ಕಿಂತ ಹೆಚ್ಚಿಗೆ ಏನೂ ಮಾಡುವುದಿಲ್ಲ ಮತ್ತು ಇದರಲ್ಲಿ ಏನೂ ಕಡಿಮೆ ಮಾಡುವುದಿಲ್ಲ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಹೇಳಿದ್ದು ಸತ್ಯವಾಗಿದ್ದರೆ ಅವನು ಯಶಸ್ವಿಯಾದನು."
Explanation
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ನಿಂದ ಆರಂಭಿಸಿ, ಅಲ್ಲಾಹು ಅವನ ಮೇಲೆ ಪ್ರತಿ ದಿನ-ರಾತ್ರಿ ಐದು ವೇಳೆಯ ನಮಾಝನ್ನು ಕಡ್ಡಾಯಗೊಳಿಸಿದ್ದಾನೆಂದು ತಿಳಿಸಿದರು.
ಆ ವ್ಯಕ್ತಿ ಕೇಳಿದನು: ಈ ಐದು ನಮಾಝ್ಗಳ ಹೊರತು ಬೇರೆ ಯಾವುದಾದರೂ ನಮಾಝ್ ನನಗೆ ಕಡ್ಡಾಯವಾಗಿದೆಯೇ?
ಅವರು ಉತ್ತರಿಸಿದರು: ಇಲ್ಲ, ಆದರೆ ನೀನು ಐಚ್ಛಿಕ ನಮಾಝ್ಗಳನ್ನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಹೊರತು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದನ್ನು ಕೂಡ ಅಲ್ಲಾಹು ನಿನಗೆ ಕಡ್ಡಾಯಗೊಳಿಸಿದ್ದಾನೆ.
ಆ ವ್ಯಕ್ತಿ ಕೇಳಿದನು: ರಮದಾನ್ ತಿಂಗಳ ಉಪವಾಸದ ಹೊರತು ಬೇರೆ ಯಾವುದಾದರೂ ಉಪವಾಸವು ನನಗೆ ಕಡ್ಡಾಯವಾಗಿದೆಯೇ?
ಅವರು ಉತ್ತರಿಸಿದರು: ಇಲ್ಲ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಉಪವಾಸಗಳ ಹೊರತು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝಕಾತ್ನ ಬಗ್ಗೆ ತಿಳಿಸಿದರು.
ಆ ವ್ಯಕ್ತಿ ಕೇಳಿದನು: ಕಡ್ಡಾಯ ಝಕಾತಿನ ಹೊರತು ಬೇರೆ ಯಾವುದಾದರೂ ದಾನ-ಧರ್ಮವು ನನಗೆ ಕಡ್ಡಾಯವಾಗಿದೆಯೇ?
ಅವರು ಉತ್ತರಿಸಿದರು: ಇಲ್ಲ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ದಾನ-ಧರ್ಮದ ಹೊರತು.
ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡ್ಡಾಯ ಕರ್ಮಗಳ ಬಗ್ಗೆ ತಿಳಿದುಕೊಂಡ ಬಳಿಕ ಆ ವ್ಯಕ್ತಿ ಹಿಂದಿರುಗಿ ಹೋಗುವಾಗ, ಯಾವುದೇ ಹೆಚ್ಚುವರಿ ಅಥವಾ ಕಡಿತ ಮಾಡದೆ ಈ ಎಲ್ಲಾ ಕಾರ್ಯಗಳನ್ನು ಚಾಚೂತಪ್ಪದೆ ನಿರ್ವಹಿಸುತ್ತೇನೆಂದು ಅಲ್ಲಾಹನ ಮೇಲೆ ಆಣೆ ಮಾಡಿ ಹೇಳಿದನು. ಆತ ಹೇಳಿ ಮುಗಿಸುತ್ತಿದ್ದಂತೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಆ ವ್ಯಕ್ತಿ ತಾನು ಆಣೆ ಮಾಡಿದ್ದನ್ನು ಸತ್ಯವೆಂದು ಸಾಬೀತುಪಡಿಸಿದರೆ ಆತ ಖಂಡಿತ ಯಶಸ್ವಿಯಾಗುತ್ತಾನೆ.
Benefits
ಆ ವ್ಯಕ್ತಿಯೊಡನೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ವರ್ತನೆಯನ್ನು ತಿಳಿಸಲಾಗಿದೆ. ಆ ವ್ಯಕ್ತಿ ತನ್ನ ಹತ್ತಿರಕ್ಕೆ ಬರಲು ಮತ್ತು ತನ್ನಲ್ಲಿ ಪ್ರಶ್ನೆ ಕೇಳಲು ಅವರು ಅನುಮತಿಸಿದರು.
ಅಲ್ಲಾಹನ ಕಡೆಗೆ ಆಮಂತ್ರಿಸುವಾಗ ಪ್ರಾಮುಖ್ಯತೆಯಿರುವ ವಿಷಯಗಳಿಂದ ಪ್ರಾರಂಭಿಸಿ, ನಂತರ ಅದಕ್ಕಿಂತ ಕಡಿಮೆ ಪ್ರಾಮುಖ್ಯತೆಯಿರುವ ವಿಷಯಗಳನ್ನು ತಿಳಿಸಬೇಕು.
ಇಸ್ಲಾಂ ಎಂದರೆ ವಿಶ್ವಾಸ ಮತ್ತು ಕರ್ಮ. ವಿಶ್ವಾಸವಿಲ್ಲದೆ ಕರ್ಮವೆಸಗಿ ಪ್ರಯೋಜನವಿಲ್ಲ ಮತ್ತು ಕರ್ಮವೆಸಗದೆ ಕೇವಲ ವಿಶ್ವಾಸವಿಟ್ಟು ಪ್ರಯೋಜನವಿಲ್ಲ.
ಈ ಕರ್ಮಗಳ ಪ್ರಾಮುಖ್ಯತೆಯನ್ನು ಮತ್ತು ಅವು ಇಸ್ಲಾಮಿನ ಸ್ತಂಭಗಳಲ್ಲಿ ಸೇರಿವೆಯೆಂದು ತಿಳಿಸಲಾಗಿದೆ.
ಐದು ವೇಳೆಯ ಕಡ್ಡಾಯ ನಮಾಝ್ಗಳಲ್ಲಿ ಜುಮಾ ನಮಾಝ್ ಕೂಡ ಒಳಪಡುತ್ತದೆ. ಏಕೆಂದರೆ, ಜುಮಾ ನಮಾಝ್ ಕಡ್ಡಾಯವಾಗಿರುವವರಿಗೆ ಅದು ಝುಹರ್ ನಮಾಝಿನ ಬದಲಿಗೆ ನಿರ್ವಹಿಸುವ ನಮಾಝ್ ಆಗಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಸ್ಲಾಂ ಧರ್ಮದ ಪ್ರಮುಖ ಕಡ್ಡಾಯ ಕರ್ಮಗಳಿಂದ ಪ್ರಾರಂಭಿಸಿದರು. ಇವು ಎರಡು ಸತ್ಯಸಾಕ್ಷ್ಯಗಳ ನಂತರದ ಸ್ತಂಭಗಳಾಗಿವೆ. ಏಕೆಂದರೆ, ಆ ವ್ಯಕ್ತಿ ಮುಸಲ್ಮಾನನಾಗಿದ್ದರು. ಪ್ರವಾದಿಯವರು ಹಜ್ಜ್ ಬಗ್ಗೆ ತಿಳಿಸಲಿಲ್ಲ. ಏಕೆಂದರೆ, ಈ ಘಟನೆ ನಡೆದದ್ದು ಹಜ್ಜ್ ಕಡ್ಡಾಯವಾಗುವ ಮೊದಲು ಆಗಿರಬಹುದು, ಅಥವಾ ಆಗ ಇನ್ನೂ ಹಜ್ಜ್ನ ಸಮಯವು ಹತ್ತಿರವಾಗದಿರಬಹುದು.
ಮನುಷ್ಯನು ಶಾಸ್ತ್ರದಲ್ಲಿ ತಿಳಿಸಲಾದ ಕಡ್ಡಾಯ ಕರ್ಮಗಳನ್ನು ಮಾತ್ರ ನಿರ್ವಹಿಸಿದರೂ ಯಶಸ್ವಿಯಾಗುತ್ತಾನೆ. ಆದರೆ ಇದರ ಅರ್ಥ ಐಚ್ಛಿಕ ಕರ್ಮಗಳನ್ನು ನಿರ್ವಹಿಸಬೇಕಾಗಿಲ್ಲ ಎಂದಲ್ಲ. ಏಕೆಂದರೆ, ಐಚ್ಛಿಕ ಕರ್ಮಗಳು ಪುನರುತ್ಥಾನ ದಿನದಂದು ಕಡ್ಡಾಯ ಕರ್ಮಗಳಲ್ಲಿ ಉಂಟಾದ ದೋಷಗಳನ್ನು ಪೂರ್ಣಗೊಳಿಸುತ್ತದೆ.
Attribution
Categories
Share hadeeth
Sharing options · 0 Total shares

