ನಿಮ್ಮ ಕರ್ಮಗಳಲ್ಲಿ ಶ್ರೇಷ್ಠವಾದ, ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಪರಿಶುದ್ಧವಾದ, ನಿಮ್ಮ ಪದವಿಗಳಲ್ಲಿ ಅತಿ ಎತ್ತರವಾದ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಯಿಸುವುದಕ್ಕಿಂತಲೂ ಉತ್ತಮವಾದ, ನೀವು ನಿಮ್ಮ ಶತ್ರುವಿನೊಂದಿಗೆ ಹೋರಾಡಿ ನೀವು ಅವರನ್ನು ಮತ್ತು ಅವರು ನಿಮ್ಮನ್ನು ಕೊಲ್ಲುವುದಕ್ಕಿಂತಲೂ ಉತ್ತಮವಾದ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ?
Choose an available translation of this Hadeeth
Hadeeth text
ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಕರ್ಮಗಳಲ್ಲಿ ಶ್ರೇಷ್ಠವಾದ, ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಪರಿಶುದ್ಧವಾದ, ನಿಮ್ಮ ಪದವಿಗಳಲ್ಲಿ ಅತಿ ಎತ್ತರವಾದ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಯಿಸುವುದಕ್ಕಿಂತಲೂ ಉತ್ತಮವಾದ, ನೀವು ನಿಮ್ಮ ಶತ್ರುವಿನೊಂದಿಗೆ ಹೋರಾಡಿ ನೀವು ಅವರನ್ನು ಮತ್ತು ಅವರು ನಿಮ್ಮನ್ನು ಕೊಲ್ಲುವುದಕ್ಕಿಂತಲೂ ಉತ್ತಮವಾದ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರು ಹೇಳಿದರು: "ತಿಳಿಸಿಕೊಡಿ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹನ ಸ್ಮರಣೆ."
Explanation
ನಾನು ಒಂದು ಕರ್ಮದ ಬಗ್ಗೆ ನಿಮಗೆ ತಿಳಿಸಿಕೊಡುವುದನ್ನು ನೀವು ಬಯಸುತ್ತೀರಾ? ಅಂದರೆ ಯಜಮಾನನಾದ ಅಲ್ಲಾಹನ ದೃಷ್ಟಿಯಲ್ಲಿ ಅತಿಶ್ರೇಷ್ಠವಾದ, ಅತ್ಯಂತ ಗಣ್ಯವಾದ, ಅತ್ಯಂತ ಫಲವತ್ತಾದ ಮತ್ತು ಅತ್ಯಂತ ಶುದ್ಧವಾದ ಒಂದು ಕರ್ಮದ ಬಗ್ಗೆ?
ಸ್ವರ್ಗದಲ್ಲಿ ನಿಮಗೆ ದೊರೆಯುವ ಸ್ಥಾನಮಾನಗಳಲ್ಲಿ ಅತ್ಯುನ್ನತವಾದ ಕರ್ಮದ ಬಗ್ಗೆ?
ನೀವು ಚಿನ್ನ ಮತ್ತು ಬೆಳ್ಳಿಯನ್ನು ದಾನ ಮಾಡುವುದಕ್ಕಿಂತಲೂ ಶ್ರೇಷ್ಠವಾದ ಕರ್ಮದ ಬಗ್ಗೆ?
ನೀವು ಸತ್ಯನಿಷೇಧಿಗಳೊಂದಿಗೆ ಹೋರಾಡಿ, ನೀವು ಅವರ ಕೊರಳು ಕೊಯ್ಯುವುದಕ್ಕಿಂತಲೂ ಮತ್ತು ಅವರು ನಿಮ್ಮ ಕೊರಳು ಕೊಯ್ಯುವುದಕ್ಕಿಂತಲೂ ಶ್ರೇಷ್ಠವಾದ ಕರ್ಮದ ಬಗ್ಗೆ?
ಸಹಾಬಿಗಳು ಹೇಳಿದರು: ಹೌದು, ನಾವು ಅದನ್ನು ಬಯಸುತ್ತೇವೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅದು ಎಲ್ಲಾ ಸಮಯಗಳಲ್ಲೂ, ಎಲ್ಲಾ ಸಂದರ್ಭಗಳಲ್ಲೂ ಪರಿಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ಮರಿಸುವುದು.
Benefits
ಎಲ್ಲಾ ಕರ್ಮಗಳನ್ನೂ ನಿಯಮಗೊಳಿಸಲಾಗಿರುವುದು ಅಲ್ಲಾಹನ ಸ್ಮರಣೆಯನ್ನು ನೆಲೆನಿಲ್ಲಿಸುವುದಕ್ಕಾಗಿದೆ. ಅಲ್ಲಾಹು ಹೇಳಿದನು: "ನನ್ನ ಸ್ಮರಣೆಗಾಗಿ ನಮಾಝನ್ನು ಸಂಸ್ಥಾಪಿಸಿರಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಅಬಾಲಯದಲ್ಲಿ ತವಾಫ್ ಮಾಡುವುದು, ಸಫಾ-ಮರ್ವಾಗಳ ಮಧ್ಯೆ ಪ್ರದಕ್ಷಿಣೆ ಮಾಡುವುದು, ಜಮ್ರಗಳಿಗೆ ಕಲ್ಲೆಸೆಯುವುದು ಮುಂತಾದ ಎಲ್ಲವನ್ನೂ ಅಲ್ಲಾಹನ ಸ್ಮರಣೆಯನ್ನು ನೆಲೆನಿಲ್ಲಿಸುವುದಕ್ಕಾಗಿ ನಿಶ್ಚಯಿಸಲಾಗಿದೆ." [ಅಬೂದಾವೂದ್ ಮತ್ತು ತಿರ್ಮಿದಿ].
ಇಝ್ಝ್ ಬಿನ್ ಅಬ್ದುಸ್ಸಲಾಂ ತಮ್ಮ 'ಅಲ್-ಕವಾಇದ್'ನಲ್ಲಿ ಹೇಳಿದರು: ಈ ಹದೀಸ್ ಸೂಚಿಸುವುದೇನೆಂದರೆ, ಎಲ್ಲಾ ಆರಾಧನೆಗಳಲ್ಲೂ ಅವುಗಳ ಪ್ರತಿಫಲವು ಆ ಆರಾಧನೆಯನ್ನು ನಿರ್ವಹಿಸಲು ವ್ಯಯಿಸುವ ಶ್ರಮಕ್ಕೆ ಅನುಗುಣವಾಗಿರುವುದಿಲ್ಲ. ಬದಲಿಗೆ, ಅಲ್ಲಾಹು ದೊಡ್ಡ ಕರ್ಮಗಳಿಗೆ ನೀಡುವ ಪ್ರತಿಫಲಕ್ಕಿಂತ ಹೆಚ್ಚಿನ ಪ್ರತಿಫಲವನ್ನು ಸಣ್ಣ ಕರ್ಮಗಳಿಗೆ ನೀಡಬಹುದು. ಕರ್ಮದ ಶ್ರೇಷ್ಠತೆಗೆ ಅನುಗುಣವಾಗಿ ಅವುಗಳಿಗಿರುವ ಪ್ರತಿಫಲವು ಹೆಚ್ಚು ಕಡಿಮೆಯಾಗುತ್ತದೆ.
ಮುನಾವಿ ಫೈದುಲ್ ಕದೀರ್ನಲ್ಲಿ ಹೇಳಿದರು: ಇಲ್ಲಿ ಅಭಿಸಂಬೋಧಿತರಾಗಿರುವ ಜನರಿಗೆ ದೇವಸ್ಮರಣೆಯು ಅತಿಶ್ರೇಷ್ಠ ಕರ್ಮವಾಗಿದೆ ಎಂಬ ಅರ್ಥದಲ್ಲಿ ಈ ಹದೀಸನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಏಕೆಂದರೆ, ಒಂದು ವೇಳೆ ಅಭಿಸಂಬೋಧಿತ ಜನರು ಯುದ್ಧರಂಗದಲ್ಲಿ ಇಸ್ಲಾಂ ಧರ್ಮಕ್ಕೆ ಪ್ರಯೋಜನ ನೀಡುವ ಶೂರರು ಮತ್ತು ವೀರರಾಗಿದ್ದರೆ, ಅವರಿಗೆ ಜಿಹಾದ್ ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಅಥವಾ ಅವರು ತಮ್ಮ ಸಂಪತ್ತಿನ ಮೂಲಕ ಬಡವರಿಗೆ ಪ್ರಯೋಜನ ನೀಡುವ ಶ್ರೀಮಂತರಾಗಿದ್ದರೆ, ದಾನ-ಧರ್ಮವು ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಅವರು ಹಜ್ಜ್ ನಿರ್ವಹಿಸಲು ಸಾಮರ್ಥ್ಯವಿರುವವರಾಗಿದ್ದರೆ ಹಜ್ಜ್ ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಅಥವಾ ಅವರು ತಂದೆ-ತಾಯಿ ಇರುವವರಾಗಿದ್ದರೆ ತಂದೆ-ತಾಯಿಗೆ ಒಳಿತು ಮಾಡುವುದು ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಈ ರೀತಿಯಲ್ಲಿ ನಮಗೆ ವಿಭಿನ್ನ ವರದಿಗಳನ್ನು ಹೊಂದಾಣಿಕೆ ಮಾಡಬಹುದಾಗಿದೆ.
ನಾಲಗೆಯ ಮೂಲಕ ಉಚ್ಛರಿಸುವ ಮತ್ತು ಹೃದಯದಲ್ಲಿ ಅರ್ಥವನ್ನು ಗ್ರಹಿಸುವ ದೇವಸ್ಮರಣೆಯು ಪರಿಪೂರ್ಣ ದೇವಸ್ಮರಣೆಯಾಗಿದೆ. ನಂತರ, ಆಲೋಚನೆ ಮಾಡುವುದು ಮುಂತಾದ ಹೃದಯದಲ್ಲಿ ಮಾತ್ರವಿರುವ ದೇವಸ್ಮರಣೆ. ನಂತರ, ನಾಲಗೆಯಲ್ಲಿ ಮಾತ್ರವಿರುವ ದೇವಸ್ಮರಣೆ. ಅಲ್ಲಾಹು ಇಚ್ಛಿಸಿದರೆ, ಈ ಎಲ್ಲಾ ವಿಧಗಳಿಗೂ ಪ್ರತಿಫಲವಿದೆ.
ಮುಸಲ್ಮಾನನು ಬೆಳಗ್ಗೆ ಮತ್ತು ಸಂಜೆ ಪಠಿಸುವ ಸ್ಮರಣೆಗಳು, ಮಸೀದಿ, ಮನೆ ಮತ್ತು ಶೌಚಾಲಯವನ್ನು ಪ್ರವೇಶಿಸುವಾಗ ಮತ್ತು ಅಲ್ಲಿಂದ ಹೊರ ಬರುವಾಗ ಪಠಿಸುವ ಸ್ಮರಣೆಗಳು ಮುಂತಾದ ನಿರ್ದಿಷ್ಟ ಸಮಯಗಳಲ್ಲಿ ಪಠಿಸುವ ಸ್ಮರಣೆಗಳನ್ನು ಪಠಿಸುತ್ತಿದ್ದರೆ ಅವನು ಅಲ್ಲಾಹನನ್ನು ಅತಿಹೆಚ್ಚು ಸ್ಮರಿಸುವವರಲ್ಲಿ ಸೇರುತ್ತಾನೆ.
Attribution
Categories
Share hadeeth
Sharing options · 0 Total shares

