ಏಕೆಂದರೆ, ಅಲ್ಲಾಹನಾಣೆ! ಅಲ್ಲಾಹು ನಿನ್ನ ಮೂಲಕ ಒಬ್ಬ ವ್ಯಕ್ತಿಗೆ ಸನ್ಮಾರ್ಗವನ್ನು ಕರುಣಿಸುವುದು ನಿನಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ
Choose an available translation of this Hadeeth
Hadeeth text
ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾಳೆ ನಾನು ಈ ಪತಾಕೆಯನ್ನು ಒಬ್ಬ ವ್ಯಕ್ತಿಗೆ ಕೊಡುವೆನು. ಅವನ ಕೈಯಿಂದ ಅಲ್ಲಾಹು ವಿಜಯವನ್ನು ದಯಪಾಲಿಸುವನು. ಅವನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುತ್ತಾನೆ ಮತ್ತು ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವನನ್ನು ಪ್ರೀತಿಸುತ್ತಾರೆ." ಪತಾಕೆ ಯಾರ ಕೈಗೆ ಕೊಡಲಾಗಬಹುದು ಎಂದು ಮಾತನಾಡುತ್ತಾ ಜನರು ಆ ರಾತ್ರಿಯನ್ನು ಕಳೆದರು. ಬೆಳಗಾದಾಗ, ಜನರೆಲ್ಲರೂ ಅದನ್ನು ತಮ್ಮ ಕೈಗೆ ಕೊಡಲಾಗಬಹುದೆಂಬ ನಿರೀಕ್ಷೆಯಿಂದ ಬೆಳಗ್ಗೆಯೇ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತೆರಳಿದರು. ಅವರು (ಪ್ರವಾದಿ) ಕೇಳಿದರು: "ಅಲೀ ಬಿನ್ ಅಬೂ ತಾಲಿಬ್ ಎಲ್ಲಿ?" ಅವರು ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಕಣ್ಣ ನೋವಿನಿಂದ ಬಳಲುತ್ತಿದ್ದಾರೆ." ಅವರು ಹೇಳಿದರು: "ಅವನ ಬಳಿಗೆ ಜನರನ್ನು ಕಳುಹಿಸಿ." ಅವರು ಬಂದಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಎರಡು ಕಣ್ಣುಗಳಿಗೆ ಉಗಿದು ಪ್ರಾರ್ಥಿಸಿದರು. ಆಗ ಅವರ ಕಣ್ಣಿನಲ್ಲಿ ಯಾವುದೇ ನೋವಿರಲಿಲ್ಲವೋ ಎಂಬಂತೆ ಅದು ಗುಣವಾಯಿತು. ಅವರು ಪತಾಕೆಯನ್ನು ಅವರಿಗೆ ಕೊಟ್ಟರು. ಅಲಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ನಮ್ಮಂತೆ ಆಗುವ ತನಕ ನಾನು ಅವರೊಂದಿಗೆ ಯುದ್ಧ ಮಾಡಬೇಕೇ?" ಅವರು ಉತ್ತರಿಸಿದರು: "ಅವರ ಅಂಗಳವನ್ನು ತಲುಪುವ ತನಕ ಸಾವಧಾನದಿಂದ ಮುಂದುವರಿಯಿರಿ. ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಕರೆಯಿರಿ. ಅಲ್ಲಾಹನ ಹಕ್ಕಿಗೆ ಸಂಬಂಧಿಸಿದಂತೆ ಅವರಿಗೆ ಏನು ಕಡ್ಡಾಯವಾಗಿದೆಯೆಂಬುದನ್ನು ತಿಳಿಸಿಕೊಡಿ.ಏಕೆಂದರೆ, ಅಲ್ಲಾಹನಾಣೆ! ಅಲ್ಲಾಹು ನಿನ್ನ ಮೂಲಕ ಒಬ್ಬ ವ್ಯಕ್ತಿಗೆ ಸನ್ಮಾರ್ಗವನ್ನು ಕರುಣಿಸುವುದು ನಿನಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ."
Explanation
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲೀ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರ ಬಗ್ಗೆ ವಿಚಾರಿಸಿದರು.
ಆಗ ಅವರು ಕಣ್ಣು ನೋವಿನಿಂದ ಬಳಲುತ್ತಿದ್ದಾರೆಂಬ ಉತ್ತರಿಸಲಾಯಿತು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಬಳಿಗೆ ದೂತರನ್ನು ಕಳುಹಿಸಿ ಅವರನ್ನು ಕರೆ ತರಿಸಿದರು. ನಂತರ ಪ್ರವಾದಿಯವರು ತಮ್ಮ ಪವಿತ್ರ ಉಗುಳಿನಿಂದ ಅವರ ಕಣ್ಣುಗಳಿಗೆ ಉಗಿದು ಪ್ರಾರ್ಥಿಸಿದರು. ಆಗ ಅವರಿಗೆ ನೋವೇ ಇರಲಿಲ್ಲವೇನೋ ಎಂಬಂತೆ ಆ ಕಾಯಿಲೆಯಿಂದ ಚೇತರಿಸಿದರು. ಅವರ ಕೈಗೆ ಪತಾಕೆಯನ್ನು ಕೊಟ್ಟು, ಶತ್ರುಗಳ ಕೋಟೆ ತಲುಪುವ ತನಕ ಎಚ್ಚರಿಕೆಯಿಂದ ಚಲಿಸಿ, ನಂತರ ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಕೊಡುಗೆಯನ್ನು ಅವರ ಮುಂದಿಡಬೇಕೆಂದು ಆದೇಶಿಸಿದರು. ಅವರು ಆ ಕೊಡುಗೆಯನ್ನು ಸ್ವೀಕರಿಸಿದರೆ, ಅವರಿಗೆ ಏನು ಕಡ್ಡಾಯವಾಗಿದೆಯೆಂಬುದನ್ನು ತಿಳಿಸಿಕೊಡಬೇಕು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲಿಯವರಿಗೆ ಜನರನ್ನು ಅಲ್ಲಾಹನ ಕಡೆಗೆ ಕರೆಯುವುದರ ಶ್ರೇಷ್ಠತೆಯನ್ನು ತಿಳಿಸಿದರು. ಅದೇನೆಂದರೆ, ಒಬ್ಬ ವ್ಯಕ್ತಿ ಸನ್ಮಾರ್ಗ ಸ್ವೀಕರಿಸಲು ಅವರು ಕಾರಣವಾದರೆ, ಅದು ಅವರಿಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ. ಕೆಂಪು ಒಂಟೆಗಳು ಅರಬ್ಬರು ಸಾಕುವ ಅಥವಾ ದಾನ ಮಾಡುವ ಅತ್ಯಮೂಲ್ಯ ಸಂಪತ್ತಾಗಿದೆ.
Benefits
ಒಳಿತಿನ ವಿಷಯದಲ್ಲಿ ಸಹಾಬಿಗಳಿಗಿದ್ದ ಉತ್ಸಾಹ ಮತ್ತು ಅದಕ್ಕಾಗಿ ಅವರು ಸ್ಪರ್ಧಿಸುತ್ತಿದ್ದುದನ್ನು ತಿಳಿಸಲಾಗಿದೆ.
ಯುದ್ಧ ಮಾಡುವಾಗ ಶಿಷ್ಟಾಚಾರ ಪಾಲಿಸುವುದು ಮತ್ತು ಅನಾವಶ್ಯಕ ಮಾತುಗಳನ್ನು ಹಾಗೂ ಕಿರಿಕಿರಿಗೊಳಿಸುವ ಶಬ್ದಗಳನ್ನು ಬಿಟ್ಟುಬಿಡುವುದು ಶಾಸ್ತ್ರೋಕ್ತ ನಿಯಮವಾಗಿದೆ.
ಯಹೂದಿಗಳ ವಿರುದ್ಧ ಗೆಲುವು ಸಾಧಿಸುತ್ತೀರಿ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದು ಮತ್ತು ಅಲ್ಲಾಹನ ಅಪ್ಪಣೆ ಪ್ರಕಾರ ಅವರ ಕೈಯಿಂದ ಅಲೀ ಬಿನ್ ಅಬೂ ತಾಲಿಬ್ ರವರ ಕಣ್ಣು ಗುಣವಾಗಿದ್ದು ಪ್ರವಾದಿತ್ವದ ಪುರಾವೆಗಳಾಗಿವೆ.
ಜನರು ಇಸ್ಲಾಂ ಸ್ವೀಕರಿಸಬೇಕು ಎನ್ನುವುದು ಜಿಹಾದ್ನ ಅತಿದೊಡ್ಡ ಗುರಿಯಾಗಿದೆ.
ಇಸ್ಲಾಂ ಧರ್ಮದ ಕಡೆಗೆ ಕರೆಯುವುದು ಹಂತ ಹಂತವಾಗಿರುತ್ತದೆ. ಮೊತ್ತಮೊದಲು, ಎರಡು ಸಾಕ್ಷ್ಯವಚನಗಳನ್ನು ಉಚ್ಛರಿಸುವ ಮೂಲಕ ಇಸ್ಲಾಂ ಧರ್ಮಕ್ಕೆ ಪ್ರವೇಶಿಸಬೇಕೆಂದು ಸತ್ಯನಿಷೇಧಿಯೊಡನೆ ವಿನಂತಿಸಲಾಗುತ್ತದೆ. ನಂತರ, ಅದರ ಬಳಿಕ ಇಸ್ಲಾಂ ಧರ್ಮದ ಕಡ್ಡಾಯ ಕಾರ್ಯಗಳನ್ನು ಆದೇಶಿಸಲಾಗುತ್ತದೆ.
ಇಸ್ಲಾಂ ಧರ್ಮಕ್ಕೆ ಕರೆಯುವುದರ ಶ್ರೇಷ್ಠತೆಯನ್ನು ಮತ್ತು ಅದರಿಂದ ಕರೆಯುವವರಿಗೆ ಮತ್ತು ಕರೆ ಸ್ವೀಕರಿಸುವವರಿಗೆ ಉಂಟಾಗುವ ಒಳಿತನ್ನು ತಿಳಿಸಲಾಗಿದೆ. ಕರೆ ಸ್ವೀಕರಿಸುವವನು ಅದರಿಂದ ಸನ್ಮಾರ್ಗವನ್ನು ಪಡೆಯುತ್ತಾನೆ ಮತ್ತು ಕರೆಯುವವನಿಗೆ ಮಹಾ ಪ್ರತಿಫಲವು ದೊರೆಯುತ್ತದೆ.
Attribution
Categories
Share hadeeth
Sharing options · 0 Total shares

