ಅದ್ವಾ ಇಲ್ಲ, ತಿಯರ ಇಲ್ಲ, ಹಾಮ ಇಲ್ಲ, ಸಫರ್ ಇಲ್ಲ. ಆದರೆ, ಸಿಂಹವನ್ನು ಕಂಡು ಓಡುವಂತೆ ಕುಷ್ಠರೋಗಿಯಿಂದ ದೂರ ಓಡಿರಿ
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದ್ವಾ ಇಲ್ಲ, ತಿಯರ ಇಲ್ಲ, ಹಾಮ ಇಲ್ಲ, ಸಫರ್ ಇಲ್ಲ. ಆದರೆ, ಸಿಂಹವನ್ನು ಕಂಡು ಓಡುವಂತೆ ಕುಷ್ಠರೋಗಿಯಿಂದ ದೂರ ಓಡಿರಿ."
Explanation
ಮೊದಲನೆಯದಾಗಿ, ಕಾಯಿಲೆಗಳು ಸ್ವಯಂ ಹರಡುತ್ತವೆಯೆಂದು ಅಜ್ಞಾನಕಾಲದ ಜನರು ನಂಬಿದ್ದರು. ಆದ್ದರಿಂದ, ಕಾಯಿಲೆಯು ಒಬ್ಬ ರೋಗಿಯಿಂದ ಇನ್ನೊಬ್ಬರಿಗೆ ಸ್ವಾಭಾವಿಕವಾಗಿ ಹರಡುತ್ತದೆಯೆಂಬ ನಂಬಿಕೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದರು. ಜಗತ್ತನ್ನು ನಿಯಂತ್ರಿಸುವವನು ಅಲ್ಲಾಹು. ರೋಗವನ್ನು ನೀಡುವವನು ಮತ್ತು ಅದನ್ನು ಗುಣಪಡಿಸುವವನು ಅವನೇ. ಅವನ ಉದ್ದೇಶ ಮತ್ತು ನಿರ್ಣಯವಿಲ್ಲದೆ ಅದು ಸಂಭವಿಸುವುದಿಲ್ಲ.
ಎರಡನೆಯದಾಗಿ, ಅಜ್ಞಾನಕಾಲದ ಜನರು ಯಾತ್ರೆ ಅಥವಾ ವ್ಯಾಪಾರಕ್ಕಾಗಿ ಹೊರಡುವಾಗ ಹಕ್ಕಿಯನ್ನು ಓಡಿಸುತ್ತಿದ್ದರು. ಅದು ಬಲಕ್ಕೆ ಹಾರಿದರೆ, ಅವರು ಸಂತೋಷಪಡುತ್ತಿದ್ದರು. ಅದು ಎಡಕ್ಕೆ ಹಾರಿದರೆ, ಅವರು ಅದನ್ನು ಅಶುಭವೆಂದು ಪರಿಗಣಿಸಿ ಹಿಂದಿರುಗುತ್ತಿದ್ದರು. ಆದ್ದರಿಂದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಕ್ಕಿಯ ಮೂಲಕ ನೋಡುವ ಈ ಶಕುನವನ್ನು ನಿಷೇಧಿಸಿದರು ಮತ್ತು ಅದನ್ನು ಮೂಢನಂಬಿಕೆಯೆಂದು ಸಾರಿದರು.
ಮೂರನೆಯದಾಗಿ, ಅಜ್ಞಾನಕಾಲದ ಜನರು ಹೇಳುತ್ತಿದ್ದರು: ಗೂಬೆ ಒಂದು ಮನೆಯ ಮೇಲೆ ಬಿದ್ದರೆ ಆ ಮನೆಗೆ ವಿಪತ್ತು ಸಂಭವಿಸುತ್ತದೆ. ಆದ್ದರಿಂದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಅಪಶಕುನವೆಂದು ನಂಬುವುದನ್ನು ನಿಷೇಧಿಸಿದರು.
ನಾಲ್ಕನೆಯದಾಗಿ, ಸಫರ್ ತಿಂಗಳನ್ನು ಅಪಶಕುನವೆಂದು ನಂಬುವುದನ್ನು ನಿಷೇಧಿಸಿದರು. ಸಫರ್ ಎಂದರೆ ಚಾಂದ್ರಮಾನ ಕಾಲಗಣನೆಯ ಎರಡನೇ ತಿಂಗಳು. ಸಫರ್ ಎಂದರೆ ಜಾನುವಾರುಗಳ ಮತ್ತು ಮನುಷ್ಯರ ಹೊಟ್ಟೆಯಲ್ಲಿರುವ ಹುಳಗಳೆಂದೂ ಹೇಳಲಾಗುತ್ತದೆ. ಅದು ತುರಿಕಜ್ಜಿ ರೋಗಕ್ಕಿಂತಲೂ ವೇಗವಾಗಿ ಹರಡುತ್ತದೆಯೆಂದು ಅವರು ನಂಬುತ್ತಿದ್ದರು. ಆದ್ದರಿಂದ ಅವರು ಆ ನಂಬಿಕೆಯನ್ನು ನಿಷೇಧಿಸಿದರು.
ಐದನೆಯದಾಗಿ, ಸಿಂಹದಿಂದ ದೂರವಿರುವಂತೆ ಕುಷ್ಠರೋಗಿಯಿಂದ ದೂರವಿರಲು ಆದೇಶಿಸಿದರು. ಇದು ದೇಹದ ಬಗ್ಗೆ ಮುಂಜಾಗ್ರತೆ ವಹಿಸುವುದು, ಅದನ್ನು ಸುರಕ್ಷಿತವಾಗಿಡುವುದು ಮತ್ತು ಅಲ್ಲಾಹು ಆದೇಶಿಸಿದ ಕಾರ್ಯ ಕಾರಣಗಳನ್ನು ನಿರ್ವಹಿಸುವುದಕ್ಕಾಗಿದೆ. ಕುಷ್ಠರೋಗ ಎಂದರೆ ದೇಹದ ಅಂಗಗಳು ಒಂದನ್ನೊಂದು ತಿನ್ನುವ ರೋಗ.
Benefits
ಅಲ್ಲಾಹನ ವಿಧಿ-ನಿರ್ಣಯದಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ. ಕಾರಣಗಳೆಲ್ಲವೂ ಅಲ್ಲಾಹನ ವಶದಲ್ಲಿವೆ. ಅವುಗಳನ್ನು ಉಂಟುಮಾಡುವವನು ಅಥವಾ ಅವುಗಳ ಪ್ರಭಾವವನ್ನು ನಿವಾರಿಸುವವನು ಅವನೇ.
ಕೆಲವು ಜನರು ಮಾಡುವಂತೆ ಕಪ್ಪು ಮತ್ತು ಕೆಂಪು ಬಣ್ಣಗಳನ್ನು, ಅಥವಾ ಕೆಲವು ಸಂಖ್ಯೆಗಳನ್ನು, ಹೆಸರುಗಳನ್ನು ಅಥವಾ ಅಂಗವಿಕಲರನ್ನು ಅಪಶಕುನವೆಂದು ನಂಬುವುದನ್ನು ನಿರರ್ಥಕವೆಂದು ಸಾರಲಾಗಿದೆ.
ಕುಷ್ಠರೋಗಿ ಮುಂತಾದ ಅಂಟುರೋಗವನ್ನು ಹೊಂದಿರುವ ಜನರಿಂದ ದೂರವಿರಬೇಕೆಂಬ ನಿಷೇಧದ ಬಗ್ಗೆ ಹೇಳುವುದಾದರೆ, ಅದು ಅಲ್ಲಾಹು ಸ್ಥಾಪಿಸಿದ ನೈಸರ್ಗಿಕ ಕ್ರಮಕ್ಕೆ ಅನುಗುಣವಾಗಿ ತನ್ನ ಪ್ರಭಾವವನ್ನು ಬೀರುವ ಕಡೆಗೆ ಸಾಗುವ ಕಾರಣಗಳಲ್ಲಿ ಒಂದಾಗಿದೆ. ಆದರೆ, ಈ ಕಾರಣಗಳು ಸ್ವತಂತ್ರವಾಗಿ ಕಾರ್ಯಾಚರಿಸುವುದಿಲ್ಲ. ಬದಲಿಗೆ, ಅಲ್ಲಾಹು ಇಚ್ಛಿಸಿದರೆ ಅದರ ಶಕ್ತಿಯನ್ನು ಹಿಂಪಡೆದು ಅದು ಪ್ರಭಾವ ಬೀರದಂತೆ ಅವನು ಮಾಡಬಹುದು. ಅಥವಾ, ಅವನು ಇಚ್ಛಿಸಿದರೆ ಅದರ ಶಕ್ತಿಯನ್ನು ಹಾಗೆಯೇ ಉಳಿಸಿ ಅದು ಪ್ರಭಾವ ಬೀರುವಂತೆ ಮಾಡಬಹುದು.
Attribution
Categories
Share hadeeth
Sharing options · 0 Total shares

